ಕನ್ನಡ ಕಿರುತೆರೆಯ ಅತೀದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 2' 'ತಮಾಷೇನೆ ಅಲ್ಲ' ಎಂಬ ಘೋಷವಾಣಿಯೊಂದಿಗೆ ಸುವರ್ಣ ಟಿವಿ ಚಾನಲ್ ನಲ್ಲಿ ಜೂ.29ರಿಂದ ಅಧ್ಯಾಯ ಆರಂಭಿಸಿದೆ. ರಿಯಾಲಿಟಿ ಶೋನಲ್ಲಿ ಅವರಿರ್ತಾರೆ ಇವರಿರ್ತಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆಯಲಾಗಿದ್ದು ವಿಭಿನ್ನ ವ್ಯಕ್ತಿತ್ವದ ಒಟ್ಟು 14 ಸ್ಪರ್ಧಿಗಳು ಬಿಗ್ ಬಾಸ್ ಮನೆಯನ್ನು ಬಲಗಾಲಿಟ್ಟು ಪ್ರವೇಶಿಸಿದ್ದಾರೆ. ಅವರು ಬಿಗ್ ಬಾಸ್ ಮನೆ ಪ್ರವೇಶಿಸುವ ಮೊದಲು ಈ ರಿಯಾಲಿಟಿ ಶೋ ಕೋಟ್ಯಂತರ ಕನ್ನಡ ಪ್ರೇಮಿಗಳ ಮನೆಯನ್ನು ಪ್ರವೇಶಿಸಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಸೀಸನ್ 2ರ ನಿರೂಪಣೆಯ ಜವಾಬ್ದಾರಿಯನ್ನೂ ಹೊತ್ತಿರುವ ನಿಮ್ಮ ನೆಚ್ಚಿನ 'ಕಿಚ್ಚ' ಸುದೀಪ್ ತಮ್ಮ ವಿಶಿಷ್ಟ ಶೈಲಿಯಲ್ಲಿ ಎಲ್ಲ ಹದಿನಾಲ್ಕು ಸ್ಪರ್ಧಿಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಮುಖವಾಡ ಹೊತ್ತು ವಿಭಿನ್ನ ರೀತಿಯಲ್ಲಿ ಎಂಟ್ರಿ ತೆಗೆದುಕೊಂಡ ಸುದೀಪ್, ಬಿಗ್ ಬಾಸ್ ಮನೆಯಲ್ಲಿರುವ, 50 ಲಕ್ಷ ರೂ. ಬಹುಮಾನ ಗೆಲ್ಲುವ ಸ್ಪರ್ಧೆಗಿಳಿದಿರುವ ಸ್ಪರ್ಧಿಗಳ 'ಅಸಲಿ' ಮುಖವಾಡವನ್ನೂ ಬಿಗ್ ಬಾಸ್ ಅನಾವರಣ ಮಾಡಲಿದ್ದಾರೆ ಎಂಬುದರ ಸೂಚನೆಯನ್ನು ನೀಡಿದ್ದಾರೆ.
ಸತತ 99 ವಾರಗಳ ಕಾಲ, ಯಾವುದೇ ಹೊರಜಗತ್ತಿನ ಸಂಪರ್ಕವೂ ಇಲ್ಲದೆ, ಸ್ಪರ್ಧಿಗಳು ಬಿಗ್ ಬಾಸ್ ಒಡ್ಡುವ ನಾನಾ ಪರೀಕ್ಷೆಗೆ ಒಡ್ಡಿಕೊಳ್ಳಲಿದ್ದಾರೆ. ಅಲ್ಲಿ ಯಾರು ಗೆಲ್ಲುತ್ತಾರೋ, ಯಾರು ಪ್ರತಿ ಶನಿವಾರ ಮನೆಯಿಂದ ಆಚೆ ಬರುತ್ತಾರೋ ಯಾರು ಬಲ್ಲರು? ಅಲ್ಲಿ ಮಾತಿನ ಕಾದಾಟವಿರಲಿದೆ, ಕ್ಲಿಷ್ಟಕರ ಟಾಸ್ಕ್ ಗಳಿಗೆ ಒಡ್ಡಿಕೊಳ್ಳಬೇಕಿದೆ, ಕುಟುಂಬವನ್ನು ಬಿಟ್ಟುಬಂದಿದ್ದೇನೆ ಎಂಬ ಭಾವುಕತೆಯನ್ನು ಮೆಟ್ಟಿ ಗಟ್ಟಿತನ ಪ್ರದರ್ಶಿಸಬೇಕಿದೆ. ಆದರೆ, ದೈಹಿಕವಾಗಿ ಅಲ್ಲ, ಯಾರು ಮನಸ್ಸಿನ ಯುದ್ಧವನ್ನು ಗೆಲ್ಲುತ್ತಾರೋ ಅವರೇ ವಿಜಯಿಶಾಲಿಯಾಗಲಿದ್ದಾರೆ.
ಬಿಗ್ ಬಾಸ್ ಸೀಸನ್ 2 ಅಂದ್ರೆ ತಾಮಾಷೇನೆ ಅಲ್ಲರೀ! ಬಿಗ್ ಬಾಸ್ ಮನೆಯಲ್ಲಿ ನಗುವಿರಲಿದೆ, ಅಳುವಿರಲಿದೆ, ಮಾತಿನ ಚಕಮಕಿ ನಡೆಯಲಿದೆ, ವ್ಯಕ್ತಿತ್ವಗಳ ಘರ್ಷಣೆ ನಡೆಯಲಿದೆ, ಬಿಗುಮಾನದ ಮುಖವಾಡ ಕಳಚಿ ಬೀಳಲಿದೆ. ತನ್ನನ್ನು ತಾನು ಗೆದ್ದವನು ಎದ್ದ, ಇಲ್ಲದಿದ್ದರೆ ಬಿದ್ದ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಸುವರ್ಣ ಟಿವಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ. ಒಂದಿಬ್ಬರು ಹಿರಿಯರನ್ನು ಹೊರತುಪಡಿಸಿದರೆ ಎಲ್ಲರೂ ಬಿಸಿರಕ್ತದವರು ಮತ್ತು ಮಾತಿನಲ್ಲಿ ಜಾಣರು. ಇನ್ನೇನು ಕೇಳ್ತೀರಿ?
ಬಿಗ್ ಬಾಸ್ ಮನೆಗೆ ಯಾರ್ಯಾರು ಬರುತ್ತಾರೆ ಎಂಬ ಬಗ್ಗೆ ಭಾರೀ ಕುತೂಹಲ ಸೃಷ್ಟಿಯಾಗಿತ್ತು. ನಾನಾ ನಟರ, ನಿರ್ದೇಶಕರ, ಸ್ವಾಮೀಜಿಗಳ ಹೆಸರುಗಳೆಲ್ಲ ಹರಿದಾಡಿದ್ದವು. ಕೊನೆಗೆ ಮನೆಯಲ್ಲಿರಲು ಒಪ್ಪಿಕೊಂಡು ಬಂದಿರುವುದು ಹದಿನಾಲ್ಕು ಸೆಲೆಬ್ರಿಟಿಗಳು. ಮೊದಲನೆಯದಾಗಿ ರಿಯಾಲಿಟಿ ಶೋ ಸೂಪರ್ ಸ್ಟಾರ್ ಎನಿಸಿಕೊಂಡಿರುವ ಅಕುಲ್ ಬಾಲಾಜಿ ಮನೆ ಪ್ರವೇಶಿಸಿದರೆ, ಹದಿನಾಲ್ಕನೆಯವರಾಗಿ ಮಲಯಾಳಂ ನಟಿ ಶಕೀಲಾ ಒಳ ಹೋದರು . ಬನ್ನಿ, ಈಗ ಸುದೀಪ್ ಪರಿಚಯಿಸಿರುವ ಸ್ಪರ್ಧಾಳುಗಳ ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೋಣ.
ಅಕುಲ್ ಬಾಲಾಜಿ : 'ಕುಣಿಯೋಣು ಬಾರಾ' ರಿಯಾಲಿಟಿ ಶೋ ಮೂಲಕ ನಿರೂಪಣೆಗೆ ಅಡಿಯಿಟ್ಟವರು ಅಕುಲ್ ಬಾಲಾಜಿ. ನಾನು ಸ್ವಲ್ಪ ಶಾರ್ಟ್ ಟೆಂಪರ್ಡ್ ಅಂತಲೇ ತಮ್ಮನ್ನು ಪರಿಚಯಿಸಿಕೊಂಡಿರುವ ಅಕುಲ್ ಭರತನಾಟ್ಯಂ ಪ್ರವೀಣ, ಲೂಸ್ ಗಳು, ಮೈನಾ, ಮಿಲನ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ದೀಪಿಕಾ ಕಾಮಯ್ಯ : ಚಿಂಗಾರಿ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ನಟಿ ಕಂ ರೂಪದರ್ಶಿ, ಬೆಂಗಳೂರಿನ ಕುವರಿ ದೀಪಿಕಾ ಕಾಮಯ್ಯ. ಕೆಲ ತಮಿಳು ಚಿತ್ರ ಮತ್ತು ಹಿಂದಿಯ ಫಟಾ ಪೋಸ್ಟರ್ ನಿಕ್ಲಾ ಹೀರೋ ಚಿತ್ರದಲ್ಲಿಯೂ ನಟಿಸಿದ್ದಾರೆ. ಫೆಮಿನಾ ಮಿಸ್ ಇಂಡಿಯಾ ಸೌತ್ ಸ್ಪರ್ಧೆಯಲ್ಲಿಯೂ ಅಂತಿಮ ಹಂತದವರೆಗೆ ಬಂದಿದ್ದ ದೀಪಿಕಾ ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಹೊಕ್ಕಿದ್ದಾರೆ.
ಲಯೇಂದ್ರ : ತೆರೆ ಮೇಲಿಗಿಂತ ಸಂಗೀತ ನಿರ್ದೇಶಕರಾಗಿ ದುಡಿದಿರುವ ಹಿರಿಯ ಕಲಾವಿದ ಲಯೇಂದ್ರ ಅವರು ಕನ್ನಡದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ಸ್ವಂತ ಅಣ್ಣ. ಹೆಂಡತಿ ಜೊತೆ ಪ್ರತಿದಿನ ಆಡುವ ಜಗಳವನ್ನು ತಪ್ಪಿಸಿಕೊಳ್ಳಲು ಬಂದಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿರುವ ಲಯೇಂದ್ರ ಬಿಗ್ ಬಾಸ್ ಮನೆಯಲ್ಲಿ ಹಾಸ್ಯದ ಹೊನಲು ಹರಿಸ್ತಾರಾ?
ಹರ್ಷಿಕಾ ಪೂಣಚ್ಚ : 'ಪಿಯುಸಿ' ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ಮುದ್ದುಮುಖದ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಹಲವಾರು ತಮಿಳು ಚಿತ್ರಗಳಲ್ಲಿ ಅದೃಷ್ಟ ಪರೀಕ್ಷಿಸಿಕೊಂಡು ಬಂದಿದ್ದಾರೆ. ಸರಿಗಮ ಲಿಟ್ಲ್ ಚಾಂಪ್ ನಿರೂಪಕಿಯಾಗಿಯೂ ಗುರಿತಿಸಿಕೊಂಡವರು. ಬಿಗ್ ಬಾಸ್ ನೀಡುವ ಕಠಿಣ ಟಾಸ್ಕ್ ಗಳಿಗೆ ಹರ್ಷಿಕಾ ಹೇಗೆ ಒಡ್ಡಿಕೊಳ್ತಾರೋ ನೋಡೋಣ.
ಸಂತೋಷ್ : ಬಾಕ್ಸ್ ಆಫೀಸಿನಲ್ಲಿ ಅಷ್ಟೇನು ಸದ್ದು ಮಾಡದ 'ನೂರು ಜನ್ಮಕು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟ ಸಂತೋಷ್. ತಮಾಷೆ ಅಂದ್ರೆ ನಟನೆಗೆ ತಮ್ಮನ್ನು ಒಡ್ಡಿಕೊಳ್ಳುವ ಮೊದಲು ಸಂತೋಷ್ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು.
ನೀತೂ ಶೆಟ್ಟಿ : 'ಜೋಕ್ ಫಾಲ್ಸ್' ಎಂಬ ಚಿತ್ರದ ಮೂಲಕ ಅಡಿಯಿಟ್ಟಿದ್ದ ನೀತೂ ಅಪ್ಪಟ ಕನ್ನಡ ಕಲಾವಿದೆ, ಮಂಗಳೂರಿನ ಮಗಳು. 'ಬೇರು' ಎಂಬ ಕಲಾತ್ಮಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನೀತೂ 'ಗಾಳಿಪಟ' ಚಿತ್ರದ ಗಯ್ಯಾಳಿ ಪಾತ್ರದ ಮುಖಾಂತರ ಮನೆಮಾತಾದವರು. ನೀತೂ ಇದ್ದರೆ ನಗುವಿಕೆ ಕೊರತೆಯಿಲ್ಲ, ಆದರೆ, ಅವರ ದಢೂತಿ ದೇಹವನ್ನು ಯಾರಾದರೂ ತಮಾಷೆ ಮಾಡಿದ್ರೆ, ಅಷ್ಟೆ!
ಅನಿತಾ ಭಟ್ : 'ಸೈಕೋ' ಚಿತ್ರ ನೋಡಿದ್ದರೆ ಅನಿತಾ ಭಟ್ ಅವರ ಪ್ರತಿಭೆಯ ಪರಿಚಯ ನಿಮಗಾಗಿರುತ್ತದೆ. ವಿಭಿನ್ನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಅಷ್ಟೊಂದು ಅವಕಾಶಗಳು ಬರದಿದ್ದಾಗ ಟಿವಿ ಕಾರ್ಯಕ್ರಮ ನಿರೂಪಣೆಗೂ ಸೈ ಎಂದವರು ಅನಿತಾ ಭಟ್. ಬಿಗ್ ಬಾಸ್ ಮೂಲಕವಾದರೂ ಅವರಿಗೆ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬರಲಿ.
ಸೃಜನ್ ಲೋಕೇಶ್ : 'ಟಿಪಿಕಲ್ ಕೈಲಾಸ್' ಸೃಜನ್ ಲೋಕೇಶ್ ಅವರ ಇತ್ತೀಚಿನ ಸಿನೆಮಾ. ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ, ಲೋಕೇಶ್ ಅವರ ಮಗ ಸೃಜನ್ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ಖ್ಯಾತಿ ಗಳಿಸಿದ್ದು 'ಮಜಾ ವಿತ್ ಸೃಜಾ' ರಿಯಾಲಿಟಿ ಶೋ ಮೂಲಕ. ಕನ್ನಡ ಕಿರುತೆರೆಯ ನಂ.1 ಎಂಟರ್ಟೇನರ್ ಎಂಬ ಹೆಗ್ಗಳಿಕೆಗೂ ಅವರಿಗಿದೆ. ಮಾತಿನಲ್ಲಿ ಅಪಾರ ತೂಕದ ಮನುಷ್ಯ ಸೃಜನ್.
RJ ರೋಹಿತ್ : ಉಳಿದವರೆಲ್ಲ ನಟರಾದರೆ ಅರಳು ಹುರಿದಂತೆ ಕನ್ನಡದಲ್ಲಿ ಮಾತನಾಡುವ ರೋಹಿತ್ ರೇಡಿಯೋ ಜಾಕಿಯಾಗಿ ಮನೆಮನೆಯನ್ನು ತಲುಪಿದವರು. ಮಾತಿನ ಮಲ್ಲ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಸದಾ ಜನರ ಸಂಪರ್ಕದಲ್ಲಿಯೇ ಇರುವ RJ ರೋಹಿತ್ ಯಾವುದೇ ಸಂಪರ್ಕವಿಲ್ಲದೆ ಬಿಗ್ ಬಾಸ್ ಮನೆಯಲ್ಲಿ ಇರುವುದೇ ದೊಡ್ಡ ಚಾಲೇಂಜ್ ಎಂದಿದ್ದಾರೆ. ಈ ಚಾಲೇಂಜ್ ಗೆದ್ದು ಬರ್ತಾರಾ?
ಶ್ವೇತಾ ಚೆಂಗಪ್ಪ : ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಚಲನಚಿತ್ರಗಳ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಗೃಹಿಣಿ ಶ್ವೇತಾ ಚೆಂಗಪ್ಪ. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದಿರುವ ಶ್ವೇತಾ ಹತ್ತನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದಾರೆ. ಅಲ್ಲಿ ಏನೇನು ಮೋಡಿ ಮಾಡಲಿದ್ದಾರೋ?
ಮಯೂರ್ ಪಟೇಲ್ : ಅಗಾಧ ಪ್ರತಿಭೆ, ಅಪ್ಪ ಮದನ್ ಪಟೇಲ್ ಅವರ ಶ್ರೀರಕ್ಷೆ ಇದ್ದರೂ ಅದೃಷ್ಟದ ಬೆಂಬಲ ಅಷ್ಟು ಸಿಗದ ನಟ 'ಮಣಿ', 'ಯಾರಿವನು', 'ನಿನ್ನದೆ ನೆನಪು' ಖ್ಯಾತಿಯ ಮಯೂರ್ ಪಟೇಲ್. ಇವರು ಬಿಗ್ ಬಾಸ್ ಮನೆಯನ್ನು ಹನ್ನೊಂದನೆಯವರಾಗಿ ಹೊಕ್ಕಿರುವ ಗಟ್ಟಿ ಸ್ಪರ್ಧಾಳು. ಇದೀಗ ತೆಲುಗು ಚಿತ್ರರಂಗದಲ್ಲೂ ಅದೃಷ್ಟ ಅರಸುತ್ತಿದ್ದಾರೆ.
VJ ಅನುಪಮಾ ಭಟ್ : ಮಗು, ಪುಟ್ಟಾ, ಸ್ವೀಟಿ, ಬೇಬಿ ಡಾಲ್, ಕೂಸು ಅಂತೆಲ್ಲ ಮನೆಯಲ್ಲಿ ಕರೆಯಿಸಿಕೊಳ್ಳುವ VJ ಅನುಪಮಾ ಭಟ್ ಮುದ್ದುಮುದ್ದಾಗಿ ನಿರೂಪಣೆ ಮಾಡುತ್ತಾ ಪ್ರೇಕ್ಷಕರ ಮನವನ್ನು ಗೆದ್ದವರು. ಅವರ ಮುಗ್ಧ ವ್ಯಕ್ತಿತ್ವ ಖಡಕ್ ಬಿಗ್ ಬಾಸ್ ಮನೆಯಲ್ಲಿ ಒಗ್ಗುತ್ತದಾ? ಕಾದು ನೋಡಿ. ಡಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿಯೂ ತಮ್ಮ ಚಮಕ್ ತೋರಿಸಿದವರು.
ಆದಿ ಲೋಕೇಶ್ : ಅಗಾಧ ಪ್ರತಿಭೆಯುಳ್ಳು ಮತ್ತೊಂದು ಪ್ರತಿಭೆ ಆದಿ ಲೋಕೇಶ್. ಹಾಸ್ಯ ನಟ ದಿ. ಮೈಸೂರು ಲೋಕೇಶ್ ಅವರ ಮಗ. ಪೂಜಾರಿ, ಬಿಡ್ಡ, ಕಾಮಣ್ಣನ ಮಕ್ಕಳು ಚಿತ್ರಗಳಲ್ಲಿ ಬೊಂಬಾಟ್ ಅಭಿನಯ ತೋರಿದವರು. ನಾಯಕನಿಗಿಂತ ಖಳನಾಯಕನ ಪಾತ್ರದಲ್ಲಿಯೇ ಹೆಚ್ಚಾಗಿ ಮಿಂಚಿರುವ ಆದಿ ಬಿಗ್ ಬಾಸ್ ಮನೆಯನ್ನು ಹೊಕ್ಕಿರುವ 'ಆಂಗ್ರಿ ಯಂಗ್ ಮ್ಯಾನ್'!
ಶಕೀಲಾ : ಇವರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ದಕ್ಷಿಣ ಭಾರತದಲ್ಲಿ 800ಕ್ಕೂ ಹೆಚ್ಚು ವೈವಿಧ್ಯಮಯ ಚಿತ್ರಗಳಲ್ಲಿ ನಟಿಸಿದ್ದಾರೆ. ಮೋನಾಲಿಸಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶಕೀಲಾ, ಪಾತರಗಿತ್ತಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪ್ಲಸ್ ಪಾಯಿಂಟ್ ಜನಪ್ರಿಯತೆ, ಮೈನಸ್ ಪಾಯಿಂಟ್ ಕನ್ನಡ ಬಾರದಿರುವುದು.